Pages

Monday, September 5, 2022

ಶಿಕ್ಷಕನೆಂಬ ಹೆಮ್ಮೆಯಿಂದ

 

ಶಿಕ್ಷಕರ ದಿನಾಚರಣೆಯ ಶುಭಾಶಯಗಳು


ಶಿಕ್ಷಕನೆಂಬ ಹೆಮ್ಮೆಯಿಂದ

ನಾನಾವ ಪಾರ್ಟಿಯ ನೇತಾರನಲ್ಲ 
ನಾನಾವ ಬ್ರಷ್ಟಚಾರಿ ಅಧಿಕಾರಿಯಲ್ಲ 
ನನ್ನ ನಿಯತ್ತು ಸ್ಪಟಿಕದಂತೆ ಸ್ವಚ್ಛವು 
ನನಗಿದೆ ಹೆಮ್ಮೆ ನಾನೊಬ್ಬ ಶಿಕ್ಷಕನೆಂದು |

ನಾನಾವುದೇ ಪಾರ್ಟಿಯ ನಂಟಿನವನಲ್ಲ
ನಾನಾವುದೇ ಆದಾಯ ಕರ ಚೋರನಲ್ಲ 
ನನಗಿದೆ ಚಿಂತೆ ರಾಷ್ಟ್ರ ಮತ್ತು ಸಮಾಜದ
ನನಗಿದೆ ಹೆಮ್ಮೆ ನಾನೊಬ್ಬ ಶಿಕ್ಷಕನೆಂದು |


ನನ್ನ ಸ್ನೇಹಿತರಾರೂ ಆತಂಕವಾದಿಗಳಲ್ಲ
ನಾನು ನನ್ನವರಾರೂ ದೇಶದ್ರೋಹಿಗಳಲ್ಲ
ಸ್ವಾರ್ಥವಿಲ್ಲ ದೇಶಹಿತಕ್ಕಾಗಿ ನನ್ನ ಜೀವನ
ನನಗಿದೆ ಹೆಮ್ಮೆ ನಾನೊಬ್ಬ ಶಿಕ್ಷಕನೆಂದು |


ನನಗಿದೆ ಹೆಮ್ಮೆ ನಿಜ ದೇಶಭಕ್ತರ ಬಗೆಗೆ
ನನ್ನ ರೈತನೂ ಯೋಧನೂ ದೇಶ ರಕ್ಷಕರು ನಮಗೆ
ತಾಯಿ ಭಾರತಿಗೆ ಜೀವನ ಅರ್ಪಿತ ನನದು
ನನಗಿದೆ ಹೆಮ್ಮೆ ನಾನೊಬ್ಬ ಶಿಕ್ಷಕನೆಂದು |





ಶೀರ್ಷಿಕೆ *ಗುರು ವಂದನೆ*



ವಿದ್ಯೆ ಬುದ್ಧಿಯನು  ಕಲಿಸಿದ ಗುರುವೆ

ತಿದ್ದಿ ತೀಡಿ ನಮ್ಮನು ಬೆಳೆಸಿದ ಪ್ರಭುವೆ

ಬದುಕಿನ ಬಂಡಿಗೆ  ದಾರಿಯ ತೋರಿದೆ

ಶಿರಬಾಗಿ ನಿಮಗೆ ನಮಿಸುವೆ.


ಮಣ್ಣಿನ ಮುದ್ದೆಯಂತೆ ನಾನಿದ್ದೆ

ತಲೆಯೊಳು ಜ್ಞಾನ ರೂಪಿ  ಬೀಜ ಬಿತ್ತಿದೆ 

ಎನ್ನಯ  ಕೌಶಲ್ಯವನರಿತು ನೀಡಿದೆ

ಸಾಧನೆ ಗುರಿ ತೋರಿದ ಗುರುವೆ.


ಹಿರಿಯರ ಕಂಡು ಗೌರವಿಸುತ

ನಡೆ ನುಡಿ ಸಿದ್ಧಾಂತ ತುಂಬುತ

ಜನ ಮನದಿ ಚಿರಸ್ಥಾಯಿಯಾಗಿ

ನಿಲ್ಲಲು ಕಾರಣೀಭೂತರಾದ ಗುರುವೆ.


ಪರರನು ಪ್ರೀತಿಯೊಳು ಕಾಣುವ

ದೇಶ ಭಕ್ತಿಯನು  ಮೆರೆಯುವ

ಬೆಳೆದ ಮನೆಗೆ ಕೀರ್ತಿ ತರುವ

ನಿಮಗೆ ವಂದಿಸುವೆ ಗುರುವೆ.


**ಶೀರ್ಷಿಕೆ:-ವಿದ್ಯಾ ಜ್ಯೋತಿ**



ಅಜ್ಞಾನವೆಂಬ ಕಳೆಯನು ಬೇರುಸಮೇತ ಕಿತ್ತುಹಾಕಿ 

ಸುಜ್ಞಾನವೆಂಬ ಬೀಜವನು ಬಿತ್ತನೆ ಮಾಡುವರು 

ಸದ್ಗುಣಗಳೆ0ಬ ನೂರಾರು ತರಹದ ಗೊಬ್ಬರ ಹಾಕಿ 

ಹೊಸಚೇತನದ ಚಿಗುರನು ಸಮಾಜದಿ ಬೆಳೆಸುವರು


ಗುರುವೆಂದರೆ ತಿಳಿಯಬೇಡಿ ಕೇವಲ ಬೋಧಕನೆಂದು 

ತಿಳಿ ನೀ ಗುರಿ ಸಾಧಿಸಲು ಇರುವ ಮಾರ್ಗದರ್ಶಕನೆಂದು 

ಅಕ್ಷರ ಕಲಿಸುವ ವ್ಯಕ್ತಿ ಮಾತ್ರ ಗುರುವಲ್ಲ 

ತಂದೆ-ತಾಯಿ,ಅಣ್ಣ-ತಮ್ಮ,ಗೆಳೆಯರು ಗುರುವಾದರಲ್ಲ 


ಗುರುವಿನ ರೂಪ ಸ್ವರೂಪ ಹತ್ತು ಹಲವಾರು 

ಗುರುವಿನ ಮಹಿಮೆಯನು ನಿಜವಾಗಿ ಬಲ್ಲವರಾರು 

ಕತ್ತಲಲ್ಲಿ ಬೆಳಕು ಹುಡುಕಲು ದಾರಿ ತೋರಿಸುವಾತ ಗುರು 

ಅಜ್ಞಾನದ ಬದುಕಲಿ ಜ್ಞಾನ ದೀಪ ಬೆಳಗಿಸುವವರು ಗುರು


ಸಾವಿರಾರು ನೋವುಗಳು ಒಡಲೊಳಗೆ ಇದ್ದರೂ 

ನಗುಮೊಗದಿ ಅಕ್ಷರವ ಕಲಿಸುವಾತ ಗುರು 

ಮಮತೆಯಿಂದ ಶಿಕ್ಷಿಸಿ ತಿದ್ದಿ ಬುದ್ಧಿ ಹೇಳುವಾತ ಗುರು 

ನನ್ನ ಬಾಳಿನ ಸುಂದರ ಶಿಲ್ಪಿಯೇ ಗುರು 


ಇಲ್ಲ ಎಂಬುದನ್ನು ಎಲ್ಲವನ್ನು ಮರೆಸಿದಾತ 

ಎಲ್ಲವೂ ಇದೆ ಎಂಬುದನ್ನು ನೆನಪಿಸಿದಾತ 

ಗುರುವೇ ನಿನಗೆ ನನ್ನ ಭಕ್ತಿಯ ನಮನ 

ಹರಸಿ ಹಾರೈಸಿದರೆ ಸುಗಮ ನಮ್ಮ ಜೀವನ 



*ತಸ್ಮೈ ಶ್ರೀ ಗುರವೇ ನಮಃ*🙏


ಜನನಿ ಹೊತ್ತು ಹೆತ್ತವಳು

ನೋವು ಸಹಿಸಿ ಮುದ್ದಿಸಿದಳು

ಮೊದಲ ನಗು ಭರಿಸಿದಳು

ತೊದಲು ನುಡಿ  

*ಬದುಕಿಗವಳು ಮೊದಲ ಗುರು*🙏 


ತನ್ನ ಕಷ್ಟ ಹುದುಗಿಸಿಟ್ಟು

ನಮ್ಮ ಭಾರ ಹೆಗಲೊಳಿಟ್ಟು

ತುತ್ತಿಗಾಗಿ ಗಳಿಸಿಕೊಟ್ಟು

ತನ್ನ ಬಯಕೆ ನಮ್ಮೊಳಿಟ್ಟು

ಕುಲದೊಳಿತಿಗೆ ಕೂಡಿ ಇಟ್ಟು

*ತಂದೆ ದಾರಿ ತೋರ್ವಗುರು*🙏


ಒಡಹುಟ್ಟಿದ ಕುಡಿಗಳು

ಅಜ್ಜಿ ಅಜ್ಜ ಬಂಧುಗಳು

ಪ್ರೀತಿ ಎರೆದ ಜೀವಗಳು

ಜೊತೆಗೆ ನಲಿದ ಮನಸುಗಳು

ಎಲ್ಲ ನಮ್ಮ *ಗುರುಗಳು*🙏

 

ಹೊತ್ತು ಹೆತ್ತು ಉಣಿಸಿ ಬೆಳೆಸಿ

ಉಡುಗೆ ತೊಡಿಸಿ ನಡಿಗೆ ಕಲಿಸಿ

 ಆಟ ನೋಟ ಕೂಟ ಬೆರೆಸಿ

ಮೋಜು ಹಾಡು ಕುಣಿತ ಇರಿಸಿ

*ಗುರು*:ವಾದರು ಅರಿವು ಕಲಿಸಿ🙏


ಬದುಕಿಗೊಂದು ಹಾದಿಬೇಕು

ಹಾದಿಯಲ್ಲಿ ಬೆಳಕು ಬೇಕು

ವಿದ್ಯೆ ವಿನಯ ಕಲಿಯಬೇಕು

ಕಲಿಯಲೊಂದು *ಶಾಲೆ* ಬೇಕು

ಜೊತೆಯಲಿರುವ ಸ್ನೇಹ ಬೇಕು

 ಗುರು ಅಕ್ಷರ ಬಿತ್ತಬೇಕು

ಜ್ಞಾನ ದಾಹ ಚಿಗುರಬೇಕು

ಅದಕೆ ನಮಗೆ *ಗುರು* ಬೇಕು🙏


ದೇಶ ಭಾಷೆ ಸಂಸ್ಕೃತಿಯಲಿ

ಹಲವು ಹಿರಿಯ ಸಾಧಕರಲಿ

ಗೆಲುವು ಪಡೆದ ಕಥೆಗಳಲಿ

ಬರೆದಿರಿಸದ ಪುಸ್ತಕದಲಿ

*ಗುರು* ವ ಹುಡುಕಿ ಭಕ್ತಿಯಲಿ

ಅನುಸರಿಸುವ ಶಕ್ತಿ ಇರಲಿ  🙏


ಬದುಕಿನಲ್ಲಿ ಹಲವು ಕವಲು

ಕಲಿವ ನೂರು ಪಾಠವಿರಲು

ಮರೆಯದಂತೆ ಅಡಿಯಿಡಲು

ಆತ್ಮಸಾಕ್ಷಿ ಬೆಳಕಾಗಲು

*ನಮ್ಮ ಬದುಕೆ ನಮಗೆ ಗುರು*🙏


*ಗುರು* ಎಲ್ಲರ ಕಾಯುತಿರಲಿ 

ಜೀವನವು ಸರಳವಿರಲಿ

ಕಾಯಕದಲಿ ನಿಷ್ಠೆಯಿರಲಿ

ಸ್ವಾರ್ಥಭಾವ ಮರೆಯಾಗಲಿ

ಪರರೊಳಿತಿನ ಭಾವವಿರಲಿ

ಶಾಂತಚಿತ್ತ ಸದಾ ಇರಲಿ

*ನಿನ್ನರಿವೇ ನಿನಗೆ ಗುರು* 

 ಎಂಬ ಮಾತು ನೆನಪಿರಲಿ 🙏


ಬದುಕಿನ  ಭರವಸೆಯ ಭಕ್ತಿಯ ಶ್ರೀ ಗುರುಪಾದಗಳಿಗೆ ಶಿರಸಾ ನಮನಗಳೊಂದಿಗೆ

ಅಕ್ಷರದ ಬೀಜ ಬಿತ್ತಿ ಅರಿವಿನ ಕಣಜ ತುಂಬಿದ ನನ್ನ ಎಲ್ಲ ಗುರುಗಳಿಗೆ ಹಾಗೂ

ನನ್ನ ಬದುಕಿನ ಎಲ್ಲ ಆಯಾಮಗಳಲ್ಲಿ ವಿವಿಧ ಅನುಭವದ ಪಾಠ ಕಲಿಸಿದ ಎಲ್ಲ ಗುರುಮನಗಳಿಗೆ ನಮನಗಳು🙏💐


 ತರುವೆ ಹೂವು ಧವನ

××××××××××××××××


ಗುರುವೇ ನಿನಗೆ ನಮನ

ತರುವೇ ಹೂವು ಧವನ


ಅಕ್ಷರ ಸಾಲನು ಕಲಿಸಿ

ಸಾಕ್ಷರ ರೂಪದಿ ನಲಿಸಿ

ಈ ಕ್ಷಣ ಎನ್ನನು ಬಲಿಸಿ

ಶಿಕ್ಷಣ ನೀಡಿದೆ ಒಲಿಸಿ||ಗು||


ಓದು ಬರಹ ಪ್ರಧಾನ

ಅದನರುಹಿದೆ ನಿಧಾನ         

ಮೋದ ಲಭಿಸುವ ವಿಧಾನ

ಒದಗಿಸಿದೆ ಶಾಲಾ ಮೈದಾನ||ಗು||


ಪಾಠ ಪ್ರವಚನ ಮುಗಿಸಿ

ಆಟೋಟದ ಜೊತೆ ನಗಿಸಿ

ತೋಟದಿ ಗಿಡಗಳ ನೆಡಿಸಿ

ಊಟಕೆ ಉನ್ನತ ದಿನಸಿ ||ಗು||


ಶಿಸ್ತು ಶಾಂತಿಯ ಪಾಲನೆ

ಮಸ್ತು ಮಜಾ ಆಮೇಲೆನೆ

ಪುಸ್ತಕದಿಂದಲೇ ಚಾಲನೆ

ಸುಸ್ತು ನೀಡದ ತೋಲನೆ||ಗು||


     **ನಮ್ಮ ಗುರುಗಳು **


ಅಕ್ಷರ ಜೊತೆಗೆ ವಿನಯವ ಕಲಿಸಿ.

 ಗುರು ಹಿರಿಯರ  ಬಗ್ಗೆ ಗೌರವ ಬೆಳೆಸಿ.

 ಅಜ್ಞಾನದ ಕತ್ತಲೆಯನ್ನು ತೊಲಗಿಸಿ.

 ಸುಜ್ಞಾನದ ಬೆಳಕಿನೆಡೆಗೆ ನಡೆಸಿದಾತ.


 ಭಯದ ಜೊತೆ ಭಕ್ತಿಯನ್ನು ತುಂಬಿದ ಆತ.

 ಸಮಾಜದ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ನಡೆದಾತ.

 ಮೇಲು ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿದಾತ.

 ಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದ ಈತ.


 ಪ್ರೀತಿಯಿಂದ ಮಕ್ಕಳ ಮನವ ಗೆದ್ದು.

 ತಾಳ್ಮೆಯಿಂದ ಸಹನೆ ಗೈದು.

 ಜೀವನದಲ್ಲಿ ನೊಂದು ಬೆಂದು.

 ಮಕ್ಕಳೊಡನೆ  ನಾನು ಎಂದು.


 ತಂದೆಯಾಗಿ ತಾಯಿಯಾಗಿ ನಿಂತೆ.

 ಮಮತೆಯಿಂದ ತಿದ್ದಿ ತಿಡಿ ಬೆಳಸಿದೆ 

 ವಾತ್ಸಲ್ಯ ಕರುಣೆ ಎಂಬ ಹಣತೆ ಹಚ್ಚಿದೆ.

 ಜಗವ ಮೆಚ್ಚುವಂತೆ ಮಾಡಿದ ನೀನು.


 ಸಮಯದ ಜೊತೆಗೆ ಸಂಸ್ಕಾರ ಕಳಿಸಿ.

 ಗುಣಮಟ್ಟದ ಶಿಕ್ಷಣ ನೀಡಿದಾತ.

 ಮಾನವೀಯ ಮೌಲ್ಯಗಳನ್ನು  ಕಳಿಸಿದಾತ.

 ಎಲ್ಲರ ಭವಿಷ್ಯಕ್ಕೆ ಕಾರಣನು ಈತ.




ಕವನದ ಶೀರ್ಷಿಕೆ,, ಅರಿವಿನ ಗುರು



ಅರಿಯದ ಲೋಕವ ಅರಿವಿಗೆ ತರುವೆ

ಪರಿಪರಿ ಪ್ರಪಂಚದ ಪರಿಚಯ ನೀಡುವೆ

ಗುರಿಯನ್ನು ತೋರುವ ಗುರುಗಳೇ ನಿಮಗೆ ನಮನ 

ಗುರುವೆಂದರೆ ಹೀಗಿರಬೇಕು ನಿಮಗೆ ನನ್ನ ನಮನ 



ದೇವರು ನಮಗೆ ಜೀವ ಕೊಡುವರು

ತಾಯಿಯು ನಮಗೆ ರೂಪ ಕೊಡುವರು

ಗುರುಗಳು ನಮಗೆ ಶಿಕ್ಷಣ ಕೊಡುವರು

ದೀಪದಂತೆ ತಾನು ಉರಿದು ಜಗಕ್ಕೆ ಬೆಳಕು ಕೊಡುವಿರಿ



ಖಾಲಿ ಆತ್ಮದ ಖಾಲಿ ತಲೆಗೆ

ಬುದ್ಧಿ ಪಕ್ವತೆಯನ್ನ ನೀವು ಕೊಡುವಿರಿ

ಗುರುವಿಗೆ ನನ್ನ ಗೌರವ ನಮನ

ಜೀವ ಚೈತನ್ಯದ ಚಿಲುಮೆ ನೀವಾಗಿರುವಿರಿ




ಬಿಲ್ವಪತ್ರೆಯೂ ಶಿವನಿಗೆ ಪ್ರಿಯವು

ಕುಂಕುಮಾರ್ಚನೆಯು ಲಕ್ಷ್ಮಿಗೆ ಪ್ರಿಯವು

ಪ್ರಿಯ ವನ್ನರ್ಪಿಸಿ ದೇವರನ್ನು ಸೋಲಿಸಬಹುದು

ನಿನ್ನೊಲಿಸುವ ವಸ್ತು ಜ್ಞಾನ ಸಾಗರ ಸಾಗರ ಹುಡುಕಿದರೂ ಸಿಗದು


ದೀಪದಂತೆ ತಾನು ಉರಿದು ಜಗಕ್ಕೆ ಬೆಳಕು ನೀಡುವೆ

ತಾಸವೆದು ಮಕ್ಕಳಿಗೆ ಜ್ಞಾನ ನೀಡುವೆ

ಗುರುಗಳ ಪಾದಕ್ಕೆ ನಿತ್ಯವೂ ನಮಿಸುವೆ

ಪ್ರತಿಫಲ ಬಯಸದೆ ನಿತ್ಯವೂ ಶ್ರಮಿಸುವೆ


 ಶೀರ್ಷಿಕೆ:- *ದೈವ ಸ್ವರೂಪಿ* 



 ಗುರುವಿನ ಮಹಿಮೆ ವರ್ಣಿಸಲಸಾ ಧ್ಯವು 

 ಮಕ್ಕಳೆಮಗೆ ಜೀವ ಬದುಕು ಎನ್ನುವ ಗುರುವು 

 ಗುರು ಶಿಷ್ಯರ ಪ್ರೀತಿಯ ಬೆಸುಗೆಯ ಬಾಂಧವ್ಯವು 

 ಜೀವಮಾನದಿ ಅಳಿಸಲಾರದ ಅನುಬಂಧವು 



 ಶಿಲೆ ಎಂಬ ಮಗುವಿಗೆ ಶಿಕ್ಷಣವೆಂಬ ಸುತ್ತಿಗೆಯಲಿ 

 ಕಟಿಯುತ್ತಾ ಅಕ್ಷರ ಮೂರ್ತಿಯನ್ನು ರೂಪಿಸುತಲಿ 

 ಅಜ್ಞಾನವೆಂಬ ಅಂಧಕಾರವನ್ನು ಅಳಿಸುತಲಿ

 ಬಾಳಿಗೆ ಹೊಸ ಬೆಳಕನು ಸದಾ ನೀಡುತಲಿ  



 ಮಕ್ಕಳ ಪಾಲಿನ ಆರಾಧ್ಯ ದೈವ ಸ್ವರೂಪಿಯಾಗಿ 

 ತನ್ನ ಕಷ್ಟಮರೆಯುತ ಮಕ್ಕಳಲ್ಲಿ ಮಗುವಾಗಿ 

 ಮಕ್ಕಳ ಭವಿಷ್ಯದ ಉತ್ತಮ ಹಿತ ಚಿಂತಕನಾಗಿ 

 ಮುಗ್ದರ ಪಾಲಿನ ಅತ್ಯುತ್ತಮ ಮಾರ್ಗದರ್ಶಕನಾಗಿ


 

 ತನ್ನ ಕಾಯಕ ಶ್ರದ್ದೆಯಿಂದ ಮಾಡುವವನು 

 ಶಿಷ್ಯರ ಬಾಳನು ಬೆಳಗಲು ಸದಾ ಶ್ರಮಿಸುವವನು

 ಬದುಕಿಗೆ ಧಾರೆ ಎರೆವ ಜ್ಞಾನದ ಖಣಿ ಇವನು 

 ಗುರು ಜಗದಿ ಮರೆಯಲಾಗದ ಮಾಣಿಕ್ಯನಿವನು



ಶೀರ್ಷಿಕೆ:- ಗುರು ಬ್ರಹ್ಮ ಗುರು ವಿಷ್ಣು 


ಶಿಕ್ಷಕ ನಿನಗೆ ನನ್ನ ನಮನ 

ದಾರಿ ತೋರಿಸು ನನಗ ನೀನು 

ಅಜ್ಞಾನದ ಕತ್ತಲೆಯ ಅಳಿಸು ನೀನು 

ಕತ್ತಲೆ ಓಡಿಸಿ ಬೆಳಗೋ ನೀನು 


ಹೆತ್ತ ತಂದೆ ತಾಯಿ ಜನ್ಮ ನೀಡಿದರೇನು 

ನಮ್ಮ ಭವಿಷ್ಯ ಬರೆಯೊ ನಿಜ ಬ್ರಹ್ಮ ನೀನು 

ಶಾಲೆ ಎಂಬ ಗುಡಿಗೆ ನಿಜ ದೇವ ನೀನು 

ನೀನಿಟ್ಟ ವರವ ಪಡೆಯುವ ಭಕ್ತ ನಾನು 


ಗುರು ಬ್ರಹ್ಮ ಗುರು ವಿಷ್ಣು ಗುರು ದೇವ 

ನಮ್ಮ ಮೃತ ಹೃದಯಕ್ಕೆ ನೀನೇ ಜೀವ ಭಾವ 

ಅನು ಕ್ಷಣ ನಿನ್ನ ನಾಮಸ್ಮರಣೆ ಮಾಡುವ 

ಜೀವನ ಮೌಲ್ಯ ಕಲಿಸಿ ಬಾಳಿಗೆ ಬೆಳಗುವ 


ಸಕಲ ಧರ್ಮಗಳಿಗೆ ಧರ್ಮ ಜ್ಯೋತಿ ನೀನು 

ಸಹಿಷ್ಣುತೆ ಸಾರುವ ಶಾಂತಿ ಬಾವುಟ ನೀನು 

ಜ್ಞಾನ ಸಂಪಾದಿಸಿ ಸಾಗರವಾದೆ ನೀನು 

ಪ್ರೀತಿ ವಾತ್ಸಲ್ಯಕ್ಕೆ ಕರೆತುಂಬಿ ಆಗರವಾದೆ ನೀನು


.                               



**ಶೀರ್ಷಿಕೆ :      ಜ್ಞಾನದಾಗಾರ* 

********************************************

ಮುಗ್ಧ ಮನಸ್ಸು ಜೋತೆಗೆ ಆಡುವ ಆಟಗಾರ

 ಮಮತೆಯಲಿ ಮಾತು ಹೇಳುವ ಮಾತುಗಾರ

ತಿಳಿಯದ ಮನಸ್ಸಗಳ ತಿದ್ದುವ ಚಿತ್ರಗಾರ

ಅಕ್ಕರೆಯಲಿ ಮುದ್ದಿಸುವ ಮುದಗಾರ 

ಎಲ್ಲ ವರ್ಗಕ್ಕೆ ಆಕಾರ ನಿಡುವ ಸೃಷ್ಟಿಕಾರ

ತಪ್ಪು ತಿದ್ದದ್ದಿದರೆ ಗದರಿಸಿ ತಿಡುವ ತಿಡುಗಾರ

ಭವ್ಯ ಪ್ರಪಂಚವನು ವರ್ಣಿಸುವ ವರ್ಣಕಾರ

ಛಲದಿಂದ ಜೀವಿಸುವಂತೆ ಮಾಡುವ ಛಲಗಾರ 

ಜ್ಞಾನಿಯನು ಸುಜ್ಞಾನಿ ಮಾಡುವ ಸುಜ್ಞಾನಿಗಾರ

ಅರಿಯದವನಿಗೆ ಅರಿವು ನೀಡುವ ಅರಿವುಗಾರ

ಆಗದಿಹದನ್ನು ಮಾಡಿ ತೋರಿಸುವ ಹಠಗಾರ 

ನಿನ್ನ ಒಲುಮೆಯಿಂದ ಜ್ಞಾನ ಒದಗಿಸುವ ಜ್ಞಾನದಾಗಾರ





 ಕಾಗದದ ದೋಣಿ**


ಶಿಥಿಲ ನೆಲಗಟ್ಟಿನಲ್ಲಿ

ಮನೆಯ ಕಟ್ಟಿರಲಾಗ

ಧರೆಗುರುಳಿ ಬೀಳುವುದು 

        ಸುರಿವ ಮಳೆಗೆ. 

ಕಾಗದದ ದೋಣಿಯದು 

ಮುಳುಗುವುದು ನೀರಿನಲಿ

ಸಾಗಲಾರದು ಪಯಣ 

           ದಡದ ಕಡೆಗೆ.


ಬಾಲ್ಯದಾ  ಶಿಕ್ಷಣವು 

ಜೀವನದ ಅಡಿಪಾಯ 

ವ್ಯರ್ಥ ಗೊಳಿಸದೆ ಸಮಯ 

              ಕಲಿಯಿರೆಲ್ಲಾ.

ವೃತ್ತಿ ಶಿಕ್ಷಣದ ಜೊತೆಗೆ 

ನೈತಿಕತೆ ಬೆರೆತಿರಲು 

ಹೂವ ಹರಡುವುದದುವೆ

 ಬಾಳಿಗೆಲ್ಲ. 


ಎಳೆಯ ಮಿಡಿಯನ್ನು ಕೊಯ್ದು 

ಹಣ್ಣು ಮಾಡಲು ಅದನ್ನು 

ಕೊಳೆತು ಹೋಗುವುದದುವೆ

ತಿಳಿಯಿರೆಲ್ಲಾ. 

ಪಕ್ವ ಮನಸ್ಸುಗಳಲ್ಲಿ 

ಸಂಬಂಧ ಬೆಸೆದಿರಲು 

ಸುಲಭ ಬದುಕಿನ ಪಯಣ

ಅರಿಯಿರೆಲ್ಲ.


ಜೀವನದ ಪಯಣದಲ್ಲಿ 

ಭದ್ರ ದೋಣಿಯನೇರಿ

ಸಾಗಬೇಕಿದೆ ನಾವು 

ತೀರದೆಡೆಗೆ.

ಸತಿ- ಪತಿಯರೊಂದಾಗಿ

ಹುಟ್ಟು ಹಾಕುತಲಿರಲು

ಬದುಕ ಪ್ರತಿ ಹೆಜ್ಜೆಯಲು 

ಯಶವು ನಮಗೆ. 


      *ಶೀರ್ಷಿಕೆ:-ಮನದ ಮಾತು*

ನನ್ನ ಜೀವನದ ಒಳ ಗುಟ್ಟುಗಳು ಏನು ಇಲ್ಲ ಎಲ್ಲಾ ತೆರೆದಿಟ್ಟ ಹಗಲು ಹಾಳೆಯ ಪುಟಗಳು

ಕೊಳೆತು ಕಳಚಿ ಬೀಳದಿರುವ ಸೂರ್ಯನ ಕಿರಣಗಳು ಇದ್ದಂತೆ//


ಭರಣಿ ರೋಹಿಣಿ ಸ್ವಾತಿ

ಮಳೆಗಳಂತ್ತೆ ಬಂದು ಹೋದ ದುಃಖವು ವಜ್ರದಂತಹ ದತ್ತ ಪದಕವು ಬಂದು ಕಾದು ನಿಂತಿದೆ ನನ್ನ ಬಾಳ ಹಾದಿಗೆ//


ದೂರ ದಾರಿ ಆದರೇನು

ನಿನ್ನ ಸ್ನೇಹ ಸಂಗ ಸೇರಲು

ಭಂಗವಾದ ಹಾದಿಯನ್ನು ಕೊಂದು ತಿಂದು ಬರುವೆನು//


ಮಂದವಿದ್ದ ಮಂದಿ ಬುದ್ದಿಗೆ

ತಿದ್ದಿ ತೀಡಿ ಜ್ಞಾನ ಗಂಗೆ ಹರಿಸುವೆ

ಮಂಡಗೆ 

ಅರಿತು ಕಲಿತು ನುರಿತು ಬೆರೆತು ಬಾಳ ಬನ್ನಿ ಹೃನ್ಮನ ಶಾಲೆಗೆ //


ಕೂಟ್ಟು ಬಿಡು ಬಿಟ್ಟು ಬಿಡು ಕೆಟ್ಟಾತನವ ಸುಟ್ಟು ಬಿಡು 

ಹಾಳು ಅಂಟು ಗೋಳು ಬಿಟ್ಟು

ನೆಟ್ಟನೆ ಹಾದಿಯಲಿ ದಿಟ್ಟತನದ ಹೆಜ್ಜೆ ಇಟ್ಟು 

ಇಟ್ಟಾ ಗುರಿಯ ಮುಟ್ಟಿ ಬಿಡು//

*************************

*ಶೀರ್ಷಿಕೆ:- ಆದರ್ಶನಾಗು*


ಕೈ ಬರಹದ ಅಕ್ಷರಗಳು ಮೂಡುತ ಸಾಗುತಿರಬೇಕು

ಮೆರವಣಿಗೆಯಂತೆ

ಓದಬೇಕು ಎನಿಸುವ ಹವ್ಯಾಸ ಚಿಗುರೊಡೆಯಬೇಕು ಬೆಳೆಯುವಂತೆ //


ಮನಸು ಮನಸುಗಳ ಬೆರೆಯಬೇಕು ಅಂತರಾಳದ ಪ್ರೀತಿಯೋಳಗೆ

ದ್ವೇಷ ಹಠ ಹಗೆ ಸುಡಬೇಕು ಅಂತರಾತ್ಮ ಗುಹೆಯೊಳಗೆ //


ಈ ಬಾಳಿನ ಪಯಣದ ವಿರಾಮ ಯಾರಿಗೆ ಗೊತ್ತು?

ಅರಿಯದು ಮುರಿಯದು ತೀರದು ಸೂರ್ಯ ಚಂದ್ರರಿಗೂ ಗೊತ್ತು 

ಸಹನಾ ಶಿಲಾಳಾಗಿ ನಿಂತ್ತಿಲ್ಲವೆ ಪೃಥ್ವಿ ನಮ್ಮನ್ನೆಲ್ಲ ಹೊತ್ತು//


 ಇಂತಹ ಸೃಷ್ಟಿ ಯೊಂದಿಗೆ

ಅನಿಷ್ಠನಾಗದೆ ಕನಿಷ್ಠವಾದರೂ ಬಾಳಿನ ಹಾದಿ ರರಾಜಿಸುವ ಅಳಿಸಲಾಗದ ಅಕ್ಷರಗಳಂತೆ ಸುರಕ್ಷೆಯಾತೆಯಾಗಿ ನಡೆಯುತ್ತಿರಬೇಕು ಸ್ನೇಹ ಜೀವಿಗಳಾಗಿ


ಶೀರ್ಷಿಕೆ :*ಮೂಕ ವೇದನೆ*


ಏಕೋ ಮನ ಬೇಸರಿಸಿದೆ 

ಒಂಟಿಯಾಗಿರ ಬೇಕಿನಿಸಿದೆ 

ಮೌನದ  ಮಾತು ಕೇಳಿದೆ 

ಮೂಕ ವೇದನೆ ಯಾಗಿದೆ 


ಎಲ್ಲೋ ಕಿರಣ ಗೋಚರಿಸಿದೆ 

ಸೆಳೆದೊಯ್ಯು ಎಂಬಂತಾಗಿದೆ 

ಮನಕೆ ಸಾಂತ್ವನ ಬೇಕಾಗಿದೆ 

ಕಾರಣ ತಿಳಿಸದೆ ಮಾಯವಾಗಿದೆ 


ಅದರ ಹಿಂದೆ ಮನ ಓಡಿದೆ 

ಕೈ ಚಾಚು ಎಂದು ಹೇಳಿದೆ 

ಸಿಗದೆ ಸತಾಯಿಸುತ್ತಿದೆ 

ಮರೀಚಿಕೆ ಎನಿಸಿದ ಹಾಗಿದೆ 


ಗುರಿ ತಲುಪುವ ದಾರಿ ಕಂಡಿದೆ 

ಗುರುವಿನ ಆದೇಶವೂ ಸಿಕ್ಕಿದೆ 

ಏಕಿನ್ನು ತಡ ಮಾಡುವೆ ಅಂದಿದೆ 

ಮನ ಗಟ್ಟಿ ಮಾಡಿ ಮುನ್ನುಗ್ಗಿದೆ 



ಡಾ. ರವೀಂದ್ರ ಕುಮಾರ್ , ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ






No comments:

Post a Comment